Friday, November 30, 2012

ಎಷ್ಟು ಎತ್ತರ ಈ ಪ್ರೇಮ ?


ಅದ್ಯಾಕೊ ಗೊತ್ತಿಲ್ಲ... ಭಾಳ ದಿನದಿಂದ ಒಂದು ಹಳೇ ಬ್ಲಾಗ್ ಆರ್ಟಿಕಲ್ ನೆನಪಾಗ್ಲಿಕ್ಕತ್ತದ.. ಅದರ ಬಗ್ಗೆ ನಾನು ನಿಮಗ ಹೇಳ್ಲೇಬೇಕು ಅನ್ನಷ್ಟು ಮನಸ್ಸಿನ್ಯಾಗ ಕುದೀಲಿಕ್ಕ ಹತ್ತ್ಯಾದ.. ಹೇಳಿ ಬಿಟ್ರ ಮನಸು ನಿರಾಳವಾಗಿ ಉಸರಾಡ್ತದ ಅನಸ್ತದ.. ಹೇಳ್ಲ್ಯಾ?

ನಾನು ಹೈದರಾಬಾದನ್ಯಾಗ ಇದ್ದೆ ಒಂದು ವರ್ಷ.. ಅವಾಗ ಬ್ಲಾಗ್ ಬಗ್ಗೆ ಇನ್ನೂ ಅಷ್ಟೊಂದು ಹುಚ್ಚು ಎಲ್ಲಾರಿಗೂ ಹತ್ತಿರಲಿಲ್ಲ.. ಅವಾಗ ನನ್ನ ಗೆಳ್ಯಾ ಒಬ್ಬಾಂವ ಬ್ಲಾಗ್ ಬರೀತಿದ್ದ.. ಅದು ಅವನ ಪರ್ಸನಲ್ ಬ್ಲಾಗ್ ಇದ್ಧಂಗ ಇತ್ತು.. ಅದರಾಗ ಒಂದು ಘಟನೆ ಬಗ್ಗೆ ಹೇಳಿದ್ದು ಇನ್ನೂ ನನ್ನ ತಲ್ಯಾಗ ಅದ.. ಅದನ್ನ ಮತ್ತ ನಾನೂ ಹೇಳತೀನಿ ನಿಮಗ..

ಒಂದು ಊರಿನ್ಯಾಗ ಒಂದೇ ಕಾಲೇಜಿನ್ಯಾಗ ಓದೋ ಹುಡುಗ (ಶಂಕರ) ಹುಡುಗಿ (ರತ್ನಾ) ಇದ್ರು.. ಶಂಕರ ರತ್ನಾನ್ನ ಭಾಳ ಪ್ರೀತಿ ಮಾಡ್ತಿದ್ದ.. ಆದ್ರ ಆಕಿಗೆ ಹೇಳಲಿಲ್ಲ.. ಆಕಿಗೆ ಲಗ್ನ ಗೊತ್ತಾಯ್ತು. ಆಕಿ ಅವನನ್ನ ಬಿಟ್ಟು ಹೋದ್ಲು.. ಅವ ಒಬ್ಬಾವ್ನೇ ಇದ್ದ.. ಏನೇನೋ ಮಾಡಿದ.. ಎಲ್ಲೆಲ್ಲೋ ಹೋದ.. ಮನಸ್ಸು ಈ ಜಗತ್ತಿನ್ಯಾಗ ಇರಲಿಲ್ಲ.. ಪುಸ್ತಕಕ್ಕ ಗಂಟುಬಿದ್ದ, ಜ್ಞಾನ ಮನಸ್ಸು ಎರಡೂ ಬೆಳೀತು..

ಕಾಲ ಮುಂದಕ್ಕ ಹೋಗ್ತದಲ್ಲ? ಹೋಯ್ತು.. ೩-೪ ವರ್ಷ ಕಳದ ಮ್ಯಾಲೆ ಮತ್ತ ಅಕಿ ಸಿಕ್ಲು.. ಆದ್ರ ಶಂಕರ ಅಂದುಕೊಂಡಂಗ ರತ್ನಾ ಅರಾಮಾಗಿ ಇರಲಿಲ್ಲ.. ಲಗ್ನ ಆದ ಎರಡು ತಿಂಗಳಿನ್ಯಾಗೆ ಅಕಿದು ಡೈವೋರ್ಸ್ ಆಗಿತ್ತು. ಯಾಕಂದ್ರ ಆಕಿ ಗಂಡ ಆಕಿಗೆ ಭಾಳ ಕಾಟ ಕೊಡ್ತಿದ್ದ. ಜೀವ ಹಿಂಡಿಬಿಟ್ಟಿದ್ದ.. ಮತ್ತ ಅಪ್ಪನ ಮನಿಗೆ ಬಂದಮ್ಯಾಲೆ ಆಕಿಗೆ ತನ್ನ ಇನ್ನೊಬ್ಬ ಗೆಳತಿಯಿಂದ ಗೊತ್ತಾಗಿತ್ತು ಶಂಕರ ತನ್ನ ಎಷ್ಟು ಪ್ರೀತಿ ಮಾಡ್ತಾನ ಅಂತ.. ಆಕಿ ನೆನಪಿನ್ಯಾಗ ಅವ ಅಷ್ಟು ವರ್ಷ ಹೆಂಗ ಹುಚ್ಚ ಆಗಿ ತಿರಿಗ್ಯಾನ ಅಂತ.. ಆಕಿ ಅವನ ಹೆಗಲ ಮ್ಯಾಲೆ ತಲಿ ಇಟ್ಟು ಮನಸು ಬಿಚ್ಚಿ ಅತ್ತು ಬಿಡತಾಳ.. ಅಮ್ಯಾಲೆ ಅವಂಗ "ನನ್ನ ಮದುವಿ ಆಗ್ತೀಯಾ?" ಅಂತ ಕೇಳತಾಳ.. ಅಂವ ಹೂಂ ಅಂದ.. ಸಮಾಜದ ಸಂಪ್ರದಾಯಕ್ಕ ಎದರ ಬಿದ್ದು ಅವರಿಬ್ಬರಿಗೂ ಲಗ್ನ ಆಯ್ತು..

ಮುಂದ ಎಲ್ಲಾ ಅರಾಮಾಗ್ತದ.. ಎರಡು ಗಂಡು ಮಕ್ಕಳೂ ಆದವು.. ಕೊನೀಗೆ ಎಲ್ಲಾ ಸುಖ ಅನ್ನೊಕ್ಕಿಂತ ಮುಂಚೆ ದುಃಖ ಅವರ ಮನ್ಯಾಗ ಕಾಲು ಹಾಕ್ತದ.. ಅವತ್ತು ರತ್ನಾ ಅಂತಾಳ "ನಿನ್ನ ಸಂಬಳ ನನಗ ಸಾಕಾಗಂಗಿಲ್ಲ, ಏನು ಕೆಲ್ಸ ಮಾಡ್ತಿಯೋ ಎನೋ! ಒಂದು ಬಂಗಾರದ ಸರ ಕಂಡಿಲ್ಲ ಒಂದು ಫಾರಿನ್ ಟ್ರಿಪ್ ಕಂಡಿಲ್ಲ". ಶಂಕರ ನಕ್ಕು ಸುಮ್ಮನೆ ಅಲ್ಲಿಂದ ಹೋಗಿಬಿಡ್ತಾನ, ಅಲ್ಲೇ ಇದ್ರ ಮಾತು ಬೆಳೀತಾವ ಅಂತ.. ಮೌನ ಮಾತ್ರ ಬೆಳೀತು. ಒಂದೆರಡು ಸರ್ತಿ ತಿಳಿಸಿ ಹೇಳಿದ, ರತ್ನಾಗ ತಿಳೀಲಿಲ್ಲ.. ಮುಂದ ಆಸ್ತಿ ಇಲ್ಲ, ಅಂತಸ್ತು ಇಲ್ಲ ಅಂತನೂ ಜಗಳ ಆದವು.. ಶಂಕರ ನಕ್ಕು ಸುಮ್ಮನಾಗ್ತಿದ್ದ.. ಮುಂದ ಅಕಿಗೆ ಜೀವನ ಅರ್ಥ ಆಗ್ತದ ಅಂತ...

ಹತ್ತು ವರ್ಷ ಆದ್ವು ಲಗ್ನ ಆಗಿ.. ಅವತ್ತು ಶಂಕರ ರತ್ನಾಗ ವಿಷ್ ಮಾಡಬೇಕು ಅಂತ ಒಂದು ಹಗ್ ಕೊಡ್ತಾನ. .ಅಕಿ ಅವಾಗ ಅವನ ಮಾರಿ ನೋಡಿ ಅಂತಾಳ.. "ನೀನು ಆರು ಫೀಟ್ ಎತ್ತರ ಇರಬೇಕಾಗಿತ್ತು.. ಅಂದ್ರ ಛೋಲೋ ಇರ್ತತಿತ್ತು.. ನನ್ನ ಎಲ್ಲ ಫ್ರೆಂಡ್ಸ್ ಹೇಳ್ತಾರ ನೀವಿಬ್ರೂ ಒಂದೇ ಎತ್ತರ ಇದ್ದೀರಿ ಅಂತ.. ರಸ್ತೆ ಮ್ಯಾಲೆ ನಡದ್ರ ನನಗ ನನ ಗಂಡ ಜೊತೀಗೆ ಬರ್ಲಿಕ್ಕಹತ್ತ್ಯಾನ ಅಂತ ಅನಸಂಗೇ ಇಲ್ಲ.." ಮಾತು ಹಂಗೇ ಮುಂದವರದು "ನೀನು ನನ್ನ ಪ್ರೀತಿ ಮಾಡಿ ಲಗ್ನ ಮಾಡ್ಕೊಂಡಿಲ್ಲ, ನಾನು ಗಂಡ ಬಿಟ್ಟಾಕಿ ಅಂತ ದಯಾ ತೋರಿಸಿ ಲಗ್ನ ಮಾಡ್ಕೊಂಡೀರಿ" ಅನ್ನೋ ತನಕ ಬರತದ..

ಈ ಸರ್ತಿ ಅಂವ ನಗಲಿಲ್ಲ.. ಒಮ್ಮೆ ಸುಮ್ಮನ ಹಂಗ ರತ್ನಾನ ಕಣ್ಣಾಗ ಕಣ್ಣಿಟ್ಟು ನೋಡ್ತಾನ.. ಅವನ ಮಾರೀ ಮ್ಯಾಲಿನ ಆ ನಗು ಅಲ್ಲಿ ಇರಲಿಲ್ಲ.. ಸುಮ್ಮನ ತಲಿ ತಗ್ಗಿಸಿಕೊಂಡು ಅಲ್ಲಿಂದ ಹೋಗಿಬಿಡ್ತಾನ.. ಅಕೀಗೆ ಯಾಕೋ ಸಿಟ್ಟ ಬರ್ತದ.. ಶಂಕರಗ ಫೋನ್ ಮಾಡಿ ಬಾಯಿಗೆ ಬಂದಹಂಗ ಬೈಯ್ತಾಳ.. ಇಷ್ಟು ವರ್ಷ ಹೇಳಿದ್ದನ್ನೇ ಮತ್ತ ಹೇಳತಾಳ.. ಅಂವ ಒಂದೇ ಮಾತ ಹೇಳತಾನ.. "ನೋಡು, ಸಿಟ್ಟಿನ ಕೈಯ್ಯಾಗ ಬುದ್ಧಿ ಕೊಡಬ್ಯಾಡ.. ನಮಗಿಂತ ಬಡವರು ಭಾಳ ಮಂದಿ ಇದ್ದಾರ.. ಅವರನ್ನ ನೋಡಿ ಹೆಂಗ ಸಂತೋಷದಿಂದ ಇರಬೇಕು ಅಂತ ಕಲೀಬೇಕು.. ದೇವರು ನಮಗ ಸಾಕಷ್ಟು ಕೊಟ್ಟಾನ, ಅದರಾಗೇ ಅರಾಮಾಗಿ ಇರೋಣಂತ".. ಆದ್ರ ರತ್ನಾಗ ತನ್ನ ಶ್ರೀಮಂತ ಗೆಳ್ಯಾರ ಮಾತಿನ ಗಲಾಟಿಯೊಳಾಗ ಅಂವನ ಮಾತು ಕೇಳಸಂಗೇ ಇಲ್ಲ..

ಅವನಿಗೆ ಒಂದು ದಿವಸ ಸಿಡಲಿನ್ಹಂಗ ಬಂದು ಬಡೀತದ ಆ ಡೈವೋರ್ಸ್ ಪೇಪರಿನ ಪೋಸ್ಟ್.. ಆಕಿ ಕಂಡಿಷನ್ ಏನೂ ಇಲ್ಲ, ಅವನ ರೊಕ್ಕಾನೂ ಬ್ಯಾಡ, ಅವನ ಮಕ್ಕಳೂ ಬ್ಯಾಡ ಏನೂ ಬ್ಯಾಡ, ನನ್ನ ಬಿಟ್ರ ಸಾಕು ಅನ್ನೋ ರೀತಿ ಇತ್ತು.. ಶಂಕರ ಅಕಿಗೆ ಫೋನ್ ಮಾಡಿ "ದಯಮಾಡಿ ಇಂಥ ನಿರ್ಧಾರ ಮಾಡಬ್ಯಾಡ, ಮಾತಾಡೋಣ" ಅಂತ ಕೇಳತಾನ. ಅಕಿ ಒಂದೂ ಮಾತ ಆಡಲಾರದೇ ಫೋನ್ ಕಟ್ ಮಾಡಿಬಿಡ್ತಾಳ.. ನೂರು ಜನ ಅಕಿಗೆ ಸಾವಿರ ರೀತಿಲೆ ಹೇಳತಾರ, ಆದ್ರ ಅಕಿಗೆ ಯಾವದೂ ಬ್ಯಾಡ ಆಗಿತ್ತು.. ಕೊನೀಗೆ ಅಂವ ಅದರ ಮ್ಯಾಲೆ ಸಹಿ ಮಾಡಬೇಕಾಗ್ತದ.. ಅಲ್ಲಿಗೆ ಶಂಕರನ ಜೀವನದ ಎರಡನೇ ಅಧ್ಯಾಯ ಮುಗದಹಂಗ ಆಗತದ.. ಮಕ್ಕಳನ್ನ ನೋಡಕೋತ ನಾ ಬದಕತೀನಿ ಅನ್ನಕೋತಾನ.. ರತ್ನಾ ಇನ್ನೊಬ್ಬ ಜಾಸ್ತಿ ರೊಕ್ಕ ಇರೋ ಗಂಡಸಿನ್ನ ಲಗ್ನ ಆಗತಾಳ..

ಇಷ್ಟೆಲ್ಲಾ ಆದಮ್ಯಾಲೆ, ಆ ಶಂಕರ ನನ್ನ ಗೆಳ್ಯಾಗ ಒಮ್ಮೆ ಬಾರಿನ್ಯಾಗ ಸಿಕ್ಕಿದ್ದ. ಮಾರಿ ಮ್ಯಾಲೆ ನಗು ಇದ್ದರೂ ಅದು ಸತ್ತು ಎಷ್ಟೋ ವರ್ಷ ಆಗ್ಯಾದ ಅಂತ ಅನ್ನಸ್ತಿತ್ತು.. ನನ್ನ ಗೆಳ್ಯಾನ್ನ ನೋಡಿದ್ದೇ ತಡ, ಎಲ್ಲಿತ್ತೋ ಎನೋ ಅಷ್ಟೊಂದು ಕಣ್ಣೀರು, ಹಿಡಕೊಂಡು ಅತ್ತಬಿಟ್ಟ.. ಸಮಾಧಾನ ಆದಮ್ಯಾಲೆ ಅಂವ ಕುಡೀಲಿಲ್ಲ.. ಎದ್ದು ಹೋಗೋ ಮುಂದ ನನ್ನ ಗೆಳ್ಯಾಗ ಒಂದ ಪ್ರಶ್ನೆ ಕೇಳಿದ..

"ಅವತ್ತು ಆಕಿ ನನ್ನ ಹೆಗಲ ಮ್ಯಾಲೆ ತಲಿ ಇಟ್ಟು ಅಳೋಮುಂದ ನನ್ನ ಹೆಗಲು ಅಕಿ ತಲೀಗೆ ಸರಿಯಾದ ಎತ್ತರದಾಗ ಇತ್ತು ಅನ್ನೊ ನೆನಪು ಸಹಿತ ಬರಲಿಲ್ಲೇನೋ ಅಕಿಗೆ? ಪ್ರೀತಿ ಪ್ರೇಮ ಅನ್ನೋದು ದೇಹದ ಎತ್ತರಕ್ಕ ಸೇರಿದ್ದೋ ಅಥವಾ ಮನಸ್ಸಿನ ಎತ್ತರಕ್ಕ ಸೇರಿದ್ದೋ? ನಿನಗ ಗೊತ್ತಾದ್ರ ನನಗೂ ಹೇಳೋ.. ಅಮ್ಯಾಲೆ ಇನ್ನೊಂದು ಪ್ರಶ್ನೆ ಅದಪಾ ನಿನಗ.. ಪ್ರೀತಿ ಅನ್ನೋದು Sympathyನೋ ಅಥವಾ Empathyನೋ? ನಿನಗೇನಾರೆ ಉತ್ತರ ಸಿಕ್ಕರ ನನಗೂ ತಿಳಸಪಾ.."

ಅಷ್ಟರೊಳಾಗ ಅಂವನ ಹಿರೀಮಗ ಬಂದು ಅವರ ಅಪ್ಪಗ "ಆಪ್ಪಾಜಿ, ನಡೀರಿ ಮನೀಗೆ, ಹೊತ್ತಾತು.. ನವೀನ ನಿಮ್ಮ ಹಾದಿ ಕಾಯಕೋತ ಕೂತಾನ, ನೀವು ಬಂದಮ್ಯಾಲೇ ಅಂವ ಊಟ ಮಾಡತಾನಂತ.." ಅಂತ ಹೇಳಿದ.. ಶಂಕರ ಹೊರಾಗ ಹೋದಮ್ಯಾಲೆ, ಆ ಹುಡುಗ ತಿರುಗಾ ವಾಪಸ್ ಬಂದು ನನ್ನ ಗೆಳ್ಯಾಗ ಹೇಳಿದ "ಕಾಕಾವ್ರೇ, ಅಪ್ಪಾಜಿಗ ನೀವರೆ ಒಂದು ಮಾತು ಹೇಳ್ರಿ.. ನಮಗ ರೊಕ್ಕಕ್ಕ ಊಟಕ್ಕ ಕಮ್ಮಿ ಇಲ್ಲ.. ಆದ್ರ ಅಪ್ಪಾಜಿ ಮಾರಿಮ್ಯಾಲೆ ಒಂದು ನಗು ನೋಡಿ ಎಷ್ಟೋ ವರ್ಷ ಆಗ್ಯಾವ.. ಇದರಕಿಂತ ನನಗ ಜಾಸ್ತಿ ಹೆಳಾಕ್ಕ ನಾ ಅಷ್ಟು ದೊಡ್ಡಾಂವ ಅಲ್ಲ.. ನಾ ಬರ್ತೇನ್ರಿ.."

ಇಷ್ಟೇ ಇದ್ದದ್ದು ಆ ಲೇಖನದೊಳಾಗ.. ಮುಂದೇನಾತು ಅಂತ ಕೇಳಲಿಕ್ಕ ನನ್ನ ಗೆಳ್ಯಾ ಮತ್ತ ನನಗ ಸಿಕ್ಕಿಲ್ಲ, ಅವನ ಫೋನ್ ನಂಬರ್ ನನ್ನ ಹತ್ರ ಇಲ್ಲ..

ನನ್ನ ಆ ಗೆಳ್ಯಾ ಎಲ್ಲಿಂದಾದ್ರೂ ಈ ಲೇಖನ ಓದಿದರ.. ನನ್ನ ನೆನಪು ನಿನಗ ಆದ್ರ.. ಅಷ್ಟು ಸಾಕು.. ನಾ ನಿನ್ನ ಮರತಿಲ್ಲಪಾ.. ಅವತ್ತು ನೀ ಬರದ ಆ ಘಟನೆನೂ ಮರತಿಲ್ಲ.. ನನಗ ಆ ಪ್ರಶ್ನೆಗಳ ಉತ್ತರ ಗೊತ್ತವ. .ಆದ್ರ ಆ ಉತ್ತರಗಳು ಆ ನಿನ್ನ ಗೆಳ್ಯಾಗ ಹೇಳಿದ್ರೂ ಈಗ ಉಪಯೋಗ ಇಲ್ಲ.. ಕಾಲ ಮುಂದಕ್ಕ ಹೋಗ್ತದಲ? ಹಂಗೇ ಮುಂದಕ್ಕ ಹೋಗ್ತದ... ಅದರ ಜೊತೀಗೆ ಆ ನಿನ್ನ ಗೆಳ್ಯಾನ ಮಕ್ಕಳ ಜ್ಞಾನನೂ ಮನಸೂ ಬೆಳೀತದ..

ಮುಂದ ಯಾವತ್ತರೆ ಆ ನಿನ್ನ ಗೆಳ್ಯಾನ ಆ ಹುಡುಗಿ ನನಗ ಸಿಕ್ರ ನಾ ಹೇಳತೀನಿ ಬಿಡು "ನೀ ಕಳಕೊಡದ್ದು ಎಂಥಾ ಎತ್ತರದ ಪ್ರೀತಿ ಅಂತ.."

Tuesday, October 30, 2012

ನನ್ನೊಳಗಿನ ಆ ಇನ್ನೊಬ್ಬನ್ನ ಹುಡುಕೋ ಮುಂದ..

ಬರದೇನೆಂದರ ಬರೆಯಲಿ ಹ್ಯಾಂಗ !

ಅವತ್ತು ನಾನು ಏನೂ ವಿಶೇಷ ಇರಲಾರದ ಒಬ್ಬ ಮಾಮೂಲಿ ಹುಡುಗ.. ಸ್ಕೂಲಿನ್ಯಾಗ ಹಾಡ ಹಾಡಿದೆ, ನಮ್ಮ ಮಾಸ್ತರ ನಾ ಛೋಲೋ ಹಾಡ್ತೀನಿ ಅಂತ ಮೊದಲನೇ ಬಹುಮಾನ ಪೆನ್ ಕೊಟ್ಟ್ರು... ಮುಂದ ಮತ್ತ ಎಷ್ಟೋ ವರ್ಷ  ಪೂರ್ತಿ ಮೌನ.. ಮನಸಿನ ಒಳಾಗ ಏನೂ ನಡದಿಲ್ಲ ಅನ್ನೋ ಹಂಗ..

ಒಮ್ಮೆ ನನ್ನ ಗೆಳ್ಯಾ ಚಿತ್ರ ಬಿಡಿಸೋದನ್ನ ನೋಡಿದೆ.. ನನಗೂ ಅದರ ಹುಚ್ಚು ಹಿಡೀತು !   ಚಿತ್ರ ಬರ್ದೇ ಬರ್ದೆ.. ಬರಲಿಲ್ಲ.. ಯಾಕೋ ನನಗ ಇದು ಬರಂಗಿಲ್ಲ ಅನ್ನೋ ಭಾವನೆ ಬಂತು.. ಬಣ್ಣ, ಬ್ರಷ್ಷು ಎಲ್ಲಾ ಕಿತ್ತಿ ಮೂಲ್ಯಾಗ ವಗದೆ.. ಹುಚ್ಚು ಬಿಟ್ಟು ಅರಾಮಾತು..

ಮುಂದ ಪಿ.ಯು.ಸಿ. ಓದೋಮುಂದ ನನಗ ಒಬ್ಬ ಹೊಸ ಗೆಳ್ಯಾ ಸಿಕ್ಕ, ಸುಧೀರ ಅಂತ.. ಅವತ್ತು ಅವನ ಮನಿಗೆ ಹೋಗಿದ್ದೇ ನನ್ನ ಜೀವನದಾಗ ಒಂದು turning point ! "ಅರ್ಥ್" ಅನ್ನೋ ಹಿಂದಿ ಸಿನೆಮಾದ ಹಾಡು ಕೇಳಿಸಿದ..  ಅದರ ಒಂದೂ ಶಬ್ದ ನನಗ ಅರ್ಥ ಆಗಲಿಲ್ಲ.. ಆದರ ಅದ್ಯಾಕೋ ಗೊತ್ತಿಲ್ಲ.. ನನಗ ಏನೋ ದೂರದಾಗ ಬೆಳಕು ಕಂಡಹಂಗ ಆಯ್ತು.. ಬಹುಶಃ ಸಾಹಿತ್ಯದ ಕಡಿಗೆ ನಾನು ನೋಡಿದ್ದು ಅದ ಮೊದಲು ಇರಬೇಕು.. ಆದರ ಅದರ ಬಗ್ಗೆ ಜಾಸ್ತಿ ತಲಿ ಕೆಡಿಸಿಕೊಬೇಕು ಅಂತ ಅನ್ನಿಸಲಿಲ್ಲ.. ನಾನು ಮೊದಲೇ ಹಿಂದಿ ಪಂಡಿತ, ಆಯಿಯೇ ಜಾಯಿಯೇ ಬಿಟ್ರ ಮುಂದ ಗೊತ್ತಿರಲಿಲ್ಲ !  ಆಮ್ಯಾಲೆ ಪಿ.ಯು.ಸಿ. ಫೇಲ್ ಆಗಿ ಡಿಪ್ಲೋಮಾ ಸೇರಿದ ಮ್ಯಾಲೆ ನನ್ನ ಹಿಂದಿ+ಉರ್ದು ಜ್ಞಾನ ಬೆಳೀತು.. ನನ್ನ ತರಗತಿಯ ಶಂಶುದ್ದೀನ್, ಆದಿಲ್, ನೂರ್, ಇರ್ಫಾನ್ ಹಾಗೂ ನನ್ನ ಕಿರಿಯ ಮಿತ್ರರಾದ ಜವಾದ್ ಇವರೆಲ್ಲಾರು  ನಂಗ ಉರ್ದು ಭಾಷೆ ಕಲೀಲಿಕ್ಕೆ ಸಹಾಯ ಮಾಡ್ಯಾರ.. ಇವರೆಲ್ಲಾರಿಗೂ ನಾನು ಯಾವತ್ತಿಗೂ ಚಿರಋಣಿ..

ಅವತ್ತು ನಾ ಕೇಳಿದ ಹಾಡುಗಳು ಹಿಂದಿ ಸಿನೆಮಾದ ಅತ್ಯುತ್ತಮ ಗಝಲ್ ಅಂತ ಅನ್ನಿಸಿಕೊಂಡೋವು !!  ಅವನ್ನ ಸಂಗೀತ ಸಂಯೋಜನೆ ಮಾಡಿ ಹಾಡಿದ್ದು ಗಝಲ್ ಜಗತ್ತಿನ ಅನಭಿಷಿಕ್ತ ದೊರೆ ಜಗಜಿತ್ ಸಿಂಗ್. ಅವರ ದನಿಯೊಳಗ ಅದೇನು ಮಾಯಾ ಇತ್ತೋ ಗೊತ್ತಿಲ್ಲ.. ನನ್ನ ಹಂಗ ಸಣ್ಣಕ ಒಳಾಗ ಎಳಕೋತ ಹೋಯ್ತು.. ನನಗ ಗೊತ್ತಿರ್ಲಾದೆ ಅದನ್ನ ಮತ್ತ ಮತ್ತ ಕೇಳಲಿಕ್ಕೆ ಶುರು ಮಾಡಿದೆ.. ಅವರ ಬ್ಯಾರೆ ಬ್ಯಾರೆ ಆಡಿಯೋ ಕ್ಯಾಸೆಟ್ಟು ಖರೀದಿ ಮಾಡಿ ನನ್ನ ಅಕ್ಕ ಎಲ್ಲಾರ ಸಲುವಾಗಿ ಕೊಡಿಸಿದ ಟೇಪ್ ರೆಕಾರ್ಡರ್ ಬಗಲಾಗ ಇಟಗೊಂಡು ಒಂದೊಂದೇ ಹಾಡು ಬರ್ಕೊಂಡೆ.. ಹಾಡಿದೆ.. ಅರ್ಥ ಗೊತ್ತಾಗಲಿಲ್ಲ ಅಂದ್ರ ನನ್ನ ಗೆಳ್ಯಾರ ತಲಿ ತಿಂದೆ.. ಅವರೂ ಸಿಟ್ಟ ಆಗಲಿಲ್ಲ, ಬದಲಿಗೆ ಕೂಡಿಸಿ ತಿಳಿಸಿ ಅದರ ಅರ್ಥ, ಮಹತ್ವ ಎಲ್ಲ ಹೇಳಿದ್ರು...  ನಾನೂ ಹಾಡಲಿಕ್ಕೆ ಶುರು ಮಾಡಿದೆ.. ಮನ್ಯಾಗ ಬೈಸಿಕೊಂಡೆ.. "ಲೇ ತಿಮ್ಮ್ಯಾ, ಏನೋ ಅವು ಹಾಡು? ಒಂದರೆ ತಿಳಿಯಂಗಿಲ್ಲ !!"  ಅಂದ್ರು..

ಕೊನೀಗೆ ನಾನೂ ಕೆಲವು ಗಝಲ್ ಬರದೆ.. ಶಾಯರಿ ಬರದೆ.. ಅಲ್ಲಿಗೆ ಒಂದು ಭಾಗ ಮುಗದಿತ್ತು.. ಬೆಂಕಿ ಇನ್ನು ಆರಿಲ್ಲ... ಅಲ್ಲಿ ನನ್ನ ಅಂಕಿತ "ಮುಜಫ್ಫರ್".. ಅದರ ಅರ್ಥ "ಗೆದ್ದವನು" ಎಂದಾದರೂ, ನಾನು ನಿಜವಾಗಿ ಗೆದ್ದಿರಲಿಲ್ಲ..

ಒಮ್ಮೆ ನಾ ಕನ್ನಡದ ತೆಕ್ಕ್ಯಾಗ ಬಿದ್ದೆ.. ಹೈದರಾಬಾದಿನ್ಯಾಗ ಇದ್ದಾಗ ಕನ್ನಡಕನ್ನಡಿ ಅಂತ ಒಂದು ಯಾಹೂ ಗುಂಪು ಇತ್ತು.. ಅಲ್ಲಿ ಶ್ರೀವತ್ಸ ಜೋಷಿ, ಕಿರಣ, ರೋಹಿತ್ ಹಿಂಗೆ ಭಾಳ ಮಂದಿ ಇದ್ದರು.. ಎಲ್ಲಾರೋ ಏನಾರೆ ಒಂದು ವಿಷಯ ತೊಗೊಂಡು ಅದರ ಬಗ್ಗೆ ಮಾತು-ಕಥಿ ಆಡತಿದ್ವಿ.. ನನಗ ಖರೇನೆ ಇಷ್ಟ ಆಗಿದ್ದು ಜೋಷಿಯವರ ಮಾತುಗಳು.. ಆವಾಗೆ ಅವರೂ ವಿಚಿತ್ರಾನ್ನ ಅಂತ ಒಂದು ಅಂಕಣ ಬರೀತಿದ್ರು.. ಏನು ಅದ್ಭುತ ಮನಿಷ್ಯಾರಿ ಅವ್ರು ! ಆದರ ನನಗ ಅಲ್ಲಿ ಜಾಸ್ತಿ ಮಾತಾಡೋ ಅಧಿಕಾರ ಇರಲಿಲ್ಲ.. ಯಾಕಂದ್ರ ಕನ್ನಡ ಸಾಹಿತ್ಯದ ಬಗ್ಗೆ ನನಗ ಏನೂ ಅಂದ್ರ ಏನೂ ಗೊತ್ತಿರಲಿಲ್ಲ ! ಮನಸ್ಸಿಗೆ ಭಾಳ ಬ್ಯಾಸರ ಆಗ್ತಿತ್ತು.. ಆದರ ಅವರು ಹೇಳೋದನ್ನ ಕೇಳಕೋತ ಇರ್ತಿದ್ದೆ.. ಆದರ ಕಿರಣ ರೋಹಿತರ ಪ್ರಶ್ನೆಗಳೂ ಭಯಂಕರ ಇರ್ತಿದ್ವು.. ಒಮ್ಮೆ ಕಿರಣರ ಮಾರಿನೂ ನೋಡೋ ಅವಕಾಶ ಸಿಕ್ಕಿತ್ತು..!!

ನನಗೂ ಸಾಹಿತ್ಯದ ಬಗ್ಗೆ ಸೆಳೆತ ಜಾಸ್ತಿ ಆಯ್ತು !  ಹೆಂಗಪ ಮುಂದ ಅನ್ನೋದ್ರಾಗೆ, ನನಗ ಅದರೊಳಗ ಸಹಾಯ ಮಾಡಿದವರು ಭಾಳ ಮಂದಿ.. ಅದರೊಳಗ ಮೊದಲು ಅಕ್ಕ, ಆಮ್ಯಾಲೆ, ನಮ್ಮ "ಸೀನಪ್ಪ" ಅರ್ಥಾತ್ "ಶ್ರೀನಿವಾಸ್ ಕುಲಕರ್ಣಿ".. ನನಗ ಒಂದೊಂದೇ ಅನುಮಾನ ಬಂದಾಗ ಅದನ್ನ ಸಣ್ಣ ಕೂಸಿಗೆ ಹೇಳಿಧಂಗ ಹೇಳಿಕೊಟ್ಟ ಅಕ್ಕ.. ಝಾಗಳ್ಯಾಡಿ, ಗುದ್ದ್ಯಾಡಿ, ವಾದಾ ಮಾಡಿ ಕೊನಿಗೆ ಇಲ್ಲಾ ನನ್ನ ಒಪ್ಪಿಸಿ ಇಲ್ಲ ತಾ ಒಪ್ಪಿ ಕೈಬಿಡತಿದ್ದ  ಸೀನಪ್ಪ !! ಇಬ್ಬರೂ ಸೇರಿ ಓಡ್ಯಾಡಿದ ಅವೆಷ್ಟು ಸಭೆಗಳು, ಆ ರವೀಂದ್ರ ಕಲಾಕ್ಷೇತ್ರ, ಚಾಮರಾಜಪೇಟೆ, ಮಲ್ಲೇಶ್ವರ, ಆ ಕನ್ನಡ ಪುಸ್ತಕ ಮೇಳಗಳು, ಆ ಪುಸ್ತಕ ನಾ ತೊಗೋತೀನಿ ಇದು ನೀ ತೊಗೋ ಅಂತ ಅನುಕೂಲ ಮಾಡ್ಕೊಳ್ಳೋದು, ಪುಸ್ತಕ ವಿನಿಮಯಗಳು... ಅಬ್ಬಬ್ಬ.. ಏನೆಲ್ಲಾ ಮಾಡಿಬಿಟ್ಟಿವಿ ಆ ಎರಡು ವರ್ಷದಾಗ !  ಇವತ್ತಿಗೂ ನನಗ ಏನಾರೆ ಅನುಮಾನ ಬಂದ್ರ ಮೊದಲು ಈ ಇಬ್ಬರನ್ನೇ ಕೇಳೋದು..  ಸಿಗಲಿಲ್ಲ ಅಂದ್ರ ಎಲ್ಲ್ಯಾರೆ ಹುಡುಕ್ಯರ ಹೇಳತಾರ !

ಕನ್ನಡದ ದೀಪ ಹಚ್ಚಿ ಪುಸ್ತಕ ಓದಲಿಕ್ಕೆ ಕೊಟ್ಟ, ಇಂಥಿಂಥಾ ಪುಸ್ತಕಗಳನ್ನು ಖರೀದಿ ಮಾಡಿ ಓದು ಅಂತ ಹೇಳಿದ ಎಲ್ಲಾರಿಗೂ ನನ್ನ ವಂದನೆಗಳು..

ಬರಿಲ್ಯಾ ಅಂತ ಒಮ್ಮೆ ಜೋಷಿಯವರನ್ನ ಕೇಳಿದ್ದೆ.. ಬರೀರಿ ಅಂದಿದ್ರು.. ಕೆಲವೊಂದು ಚುಟುಕು ಬರದೆ, ಕವನ ಬರದೆ, ಅನುವಾದನೂ ಮಾಡಿದೆ... ಎಲ್ಲಾರಿಗೂ ಇಷ್ಟ ಆಯ್ತು.. ಬರಿ ಬರಿ ಅಂತ ಪ್ರೋತ್ಸಾಹ ಕೊಟ್ಟ್ರು.. ಬರೀಲ್ಯಾ? ಅಂತ ಫೇಸಬುಕ್ ಗೆಳ್ಯಾರಿಗೂ ಕೇಳಿದೆ.. ಬರಿಯೋ ಮಾರಾಯ ಅಂದ್ರು (ಹಹಹಹ.. ಖರೇನೆ ಅಂದದ್ದು ಇಬ್ಬರೋ ಮೂವರೋ ಇರಬೇಕು! ನಾ ಯಾಕ ಬಿಟ್ಟೇನು! ).. ಬರೀಲಿಕ್ಕ ಶುರು ಮಾಡೀನಿ.. ಏನಾಗ್ತದ ನೋಡಮ..

ಎಲ್ಲೆಲ್ಲೋ ತಿರಗತಿದ್ದ ನನಗ ಇಲ್ಲೇ ಬೆಳಕು ಅದ, ಬಾ ನೋಡು ಅಂತ ಕೈ ಹಿಡದು ಕೂಡಿಸ್ಯಾರ.. ನನಗೂ ಇಲ್ಲೇ ಸುಖ ಅದ ಅಂತ ಒಳಾಗಿಂದ ಒಂದು ಮಾತು ಕೇಳಸ್ಲಿಕ್ಕ ಹತ್ತ್ಯಾದ..!  ನನ್ನೊಳಗಿನ ಆ ಇನ್ನೊಬ್ಬನೂ ಇಲ್ಲೇ ಸಿಗತಾನ ಅಂತ ಅನ್ನಿಸಲಿಕ್ಕ ಹತ್ತ್ಯಾದ..

ಸಿಗತಾನ ಅಂತೀರೇನು ?

Tuesday, October 23, 2012

ಗೆಳೆಯನ ರೊಳ್ಳಿಗಳು !!

ಬರೆದೇನೆಂದರ ಬರೆಯಲಿ ಹ್ಯಾಂಗ !

ಗೆಳೆಯನ ರೊಳ್ಳಿಗಳು !!


ಅವತ್ತು ಸುಮ್ಮನೆ ಫೇಸಬುಕ್ ಮ್ಯಾಲೆ ಏನೋ ಓದಕೊತ ಕೂತಿದ್ದೆ ! ನನ್ನ ಗೆಳ್ಯಾ ಒಬ್ಬಾವ ಏನೋ ಲಿಂಕ್ ಕಳಿಸಿದ.. ಅದು ಅವ ಬರಿಯೋ ಒಂದು ಬ್ಲಾಗ್ ಆಗಿತ್ತು... ಏನೋ ಬರದಾನ ನೋಡಮ ಅಂತ ಕ್ಲಿಕ್ ಮಾಡಿ ನೋಡಿದೆ...
ಮತ್ತ ಅದ ಹಳೆ ಪ್ರೇಮ ರೋಗದ ಅಳುಬುರುಕ ಕಥಿ !

ಅವ ತನ್ನ ಪ್ರೀತಿ ಮುರುದ ಬಿದ್ದ ಒಂದು ವರ್ಷ ಆಯ್ತು ಅಂತ ಅದರ ವಾರ್ಷಿಕೋತ್ಸವ ಆಚರಣೆ ಮಾಡ್ತಿದ್ದ.. ಜೊತಿಗೆ ಒಂದು ಕವನ ಬ್ಯಾರೆ !
ನೀ ಇದ್ದಾಗ ಹಿಂಗಿತ್ತು, ನೀ ಹೋದಿ, ಆಮ್ಯಾಲೆ ಹಿಂಗಾತು ಅಂತ ಏನೇನೋ ಬರ
ದಿದ್ದ.. ನನಗ್ಯಾಕೋ ಓದಲಿಕ್ಕೆ ಮನಸ್ಸು ಬರಲಿಲ್ಲ.. ಇರ್ಲಿ ಪಾಪ ಏನೋ ಕಳಿಸ್ಯಾನ ಅಂತ ಓದಿದೆ.. ಬರೆ ಅದೇ ಕಥಿ..

ನನಗ್ಯಾಕೋ ಮನಸ್ಸಿಗೆ ಬ್ಯಾಸರ ಆಯ್ತು.. ನನ್ನ ಗೆಳ್ಯಾಗ ಮೋಸ ಆಗ್ಯಾದ ಅಥವಾ ಅವನ ಹುಡುಗಿ ಅವನ್ನ ಬಿಟ್ಟು ಹೋಗ್ಯಾಳ ಅಂತ ಅಲ್ಲ..
ಆಕಿ ಬಿಟ್ಟು ಹೋಗ್ಯಾಳ ಅಂದ್ರ ಇವನಿಗೆ ಇಷ್ಟು ಬ್ಯಾಸರ ಆಯ್ತೇನು ?? ಬಿಟ್ಟು ಹೋದರ ಬ್ಯಾಸರ ಆಗೋವಷ್ಟು 
ಹತ್ರ ಇದ್ದಳಾ ಅಕಿ ?? ಬಿಟ್ಟು ಹೋಗಮುಂದ ಆಕಿಗೆ ಏನು ಅನ್ನಸಲಿಲ್ಲಾ ? 

ಹೋಗ್ಲಿ, ಆಕಿ ಬಿಟ್ಟು ಹೋಗ್ಯಾಳ ಅಂದ್ರ ಇವನಿಗೆ ಏನಾರೆ ಮನೋರೋಗ ಅದನಾ ? ಮನೋರೋಗ ಅಂದ್ರೆ ಘಾಬರಿ ಆಗಬ್ಯಾಡ್ರಿ.. ನಾನು ಹೇಳಿದ್ದು ಮನಸ್ಸಿನ ಏನೋ ಒಂದು ಕೆಟ್ಟ ಚಾಳಿ.. ಯಾಕಂದ್ರೆ ಭಾಳಷ್ಟು ಹುಡುಗ್ಯಾರು ಹುಡುಗರ ಮನಸ್ಸು ನೋಡೇ ಬಿಟ್ಟು ಹೋಗ್ತಾರ..

ಇಲ್ಲ ಹಂಗ ಏನೂ ಇರಲಿಕ್ಕಿಲ್ಲ ಅನ್ನಸ್ತಿತ್ತು ಮನಸ್ಸಿಗೆ.. ಯಾಕಂದ್ರ ಅವ ಹೆಂಗ ಇದ್ದಾನ ಅಂತ ನನಗ ಗೊತ್ತಿತ್ತು.. ಮನಸ್ಸಿನ್ಯಾಗ ನೂರು ಬ್ಯಾಸರಿಕಿ ಇದ್ದರೂ ಹೊರಾಗ ಏನಾರೆ ತಮಾಶಿ ಮಾಡ್ಕೊತ ಓಡ್ಯಾಡ್ತಿರ್ತಾನ.. ಎಲ್ಲಾರ್ನೂ ನಗಸಬೇಕು ಅಂತ.. ಅಂಥಾವ ಒಬ್ಬ ಹುಡುಗಿಗೆ ಬ್ಯಾಸರ ಆದ್ನೇನು ?

ನನಗ ಅವ ಯಾಕ ಅದೇ ಹಳೆ ಕಥಿ ಬಗ್ಗೆ ಮತ್ತ ಮತ್ತ ನೆನಿಸಿ ನೆನಿಸಿ ಪಾನಮತ್ತ ಆಗ್ತಾನೋ ಗೊತ್ತಿಲ್ಲ.. ಕಣ್ಣು ಕೆಂಪಗ ಆಗಿರ್ತಾವ, ಒಳಾಗಿನ ದುಖಃ ಹೊರಾಗ ಬರಲಾರದೆ ಮಾರಿ ದಪ್ಪ ಆಗಿರ್ತದ, ಹೊರಾಗ ನಗ್ತಿರ್ತಾನ.. ಯಾರ್ಯಾರಿಗೋ ಏನಾರೆ ಅಂತಾನ.. ಅವರು ನಗತಾರ.. ಇವ ಸುಮ್ಮನಾಗ್ತಾನ... ನಾನೂ ಅವನ ಮಾರಿ ನೋಡಿ ಸುಮ್ಮನೆ ಇರ್ತೀನಿ..

ನನಗ ಅವನ ಈ ಪ್ರೇಮದ ಬಗ್ಗೆ ಜಾಸ್ತಿ ಗೊತ್ತಿಲ್ಲ.. ಯಾವುದರ ಬಗ್ಗೆ ಗೊತ್ತಿಲ್ಲೋ ಅದರ ಬಗ್ಗೆ ಮಾತಾಡೋದು ತಪ್ಪಾಗ್ತದ.. ಆದ್ರೆ ಹುಡುಗ್ಯಾರ ಬಗ್ಗೆ ನನಗ ಸ್ವಲ್ಪರೆ ಗೊತ್ತದ.. (ಅಂತ ನಾ ಅನ್ಕೊಂಡಿನೇನೋ ಗೊತ್ತಿಲ್ಲ !) ಇಂಥಾ ಕಥಿ ಕೇಳಿದ್ರೆ ನನಗ ಏನೋ ಬ್ಯಾಸರ ಆಗ್ತದ.. ಒಂದು ಕಥಿ ನಾನೂ ಕೇಳಿದ್ದೆ. ಒಂದು ದೊಡ್ಡ ಆಳದ ಮರ ಇರ್ತದ.. ಅದರ ಒಂದು ಕೊಂಬಿ ಮ್ಯಾಲೆ ಒಂದು ಸಣ್ಣ ಗಿಳಿ ಬಂದು ಕೂಡ್ತದ.. ಮರದ ಜೊತಿಗೆ ಗೆಳೆತನ ಮಾಡ್ತದ.. ದೊಡ್ದದಾತು, ಹಾರಿತು, ಇನ್ನು ಮ್ಯಾಲೆ ಹಾರಿತು.. ಆಕಾಶ ಜಾಸ್ತಿ ಇಷ್ಟ ಆತು, ಮರದ ಕೊಂಬಿ ಬ್ಯಾಸರ ಆತು.. ಒಮ್ಮೆ ಹಾರಿದ್ದು ಮತ್ತ ತಿರುಗಿ ಬರಲಿಲ್ಲ.. ಮರಕ್ಕ ಹಾದಿ ಕಾದು ಕಾದು ಸಾಕಾಯ್ತು.. ಮನಸಿನ್ಯಾಗೆ ಒಮ್ಮೆ ನಕ್ಕು ಸುಮ್ಮನಾಯ್ತು..

ಹಿಂಗ ಇನ್ನೊದು ಮರದ ಕಥಿನೂ ಶುರು ಆಯ್ತು..

ಆದ್ರ ಇಲ್ಲಿ ನಮಗ ಗಿಳಿ ಮೋಸ ಮಾಡಿತೋ ಇಲ್ಲ ಮರ ಮೋಸ ಹೋಯ್ತೋ ಅನ್ನೋದು ಮುಖ್ಯ ಅಲ್ಲ.. ಗಿಳಿ ತನಗ ಬೇಕಿದ್ದು ಮಾಡಿತು.. ಮರ ಗಿಳಿಗೆ ತನ್ನ ಮಿತಿ ಒಳಗಾ ಏನೇನು ಕೊಡಲಿಕ್ಕೆ ಆಗ್ತದೋ ಅದೆಲ್ಲ ಕೊಟ್ಟಿತ್ತು.. ಆದ್ರ ಅದರ ಮ್ಯಾಲೆ ತನ್ನ ಹಕ್ಕು ಅದ ಅಂತ ಮಾತ್ರ ಅನ್ಕೊಳ್ಳಿಲ್ಲ.. ಗಿಳಿ ಹಾರಿ ಹೋದ ಮ್ಯಾಲೆನೂ ಮರ ಅಲ್ಲೇ ಇತ್ತು..

ತನ್ನ ಎಲ್ಲ ತೋಳುಗಳನ್ನ ಚಾಚಿಕೊಂಡು ನಿಂತಿತ್ತು.. ಅದಕ್ಕ ಒಂದು ಮಾತ್ರ ಗೊತ್ತು.. ನೂರಾರು ಗಿಳಿ ಬರ್ತಾವ, ಹೋಗ್ತಾವ..
ಅದಕ್ಕ ಗೊತ್ತಿತ್ತು.. ನಾ ಮಾತ್ರ ಇಲ್ಲೇ ಇರೋದು ಅಂತ.. ಬರೋ ಗಿಳಿಗಳಿಗೆಲ್ಲ ಆಶ್ರಯ ಕೊಡಬೇಕು ಅಂತ..

ಆದ್ರ ಹಾರಿ ಹೋದ ಗಿಳಿ ಸಲುವಾಗಿ ಆ ಆಲದ ಮರ ಕಣ್ಣೀರು ಇಡಬೇಕೋ ?

ಬ್ಯಾಡ ಅಂತ ನನ್ನ ಅನಿಸಿಕಿ...

ನೀವೇನಂತೀರಿ ?

Sunday, December 20, 2009

ನನ್ನ ನಿನ್ನ ಬದುಕು...

ಕುಳಿತು ಯೋಚಿಸುತಿದ್ದೆ
ನಲ್ಲೆ ನಾ ನಿನ್ನೆ
ಹೇಳಿಕೊಳ್ಳುವಂತಹದೇನು
ನಾ ನಿನಗೆ ಕೊಟ್ಟೆ ?

ಬಾಳು ಕೊಟ್ಟೆನೆಂದೆಯಾ ?
ಬದುಕ ಕಿತ್ತಿಕೊಂಡೆ..

ಮುತ್ತಿನಂಥ ಮಗುವನಿತ್ತೆನೆಂದರೆ
ನಿನ್ನತನವ ಕಿತ್ತುಕೊಂಡೆ..

ಹೆಸರು ಕೊಟ್ಟೆ ಮನೆಯ ಕೊಟ್ಟೆ
ಮನದ ನೆಮ್ಮದಿ ನಿನ್ನಿಂದ ಕಿತ್ತುಕೊಂಡೆ..

ನಿನ್ನ ಅಳಲಿಗೆ ನನ್ನ ಕಿವಿಯ ಕೊಟ್ಟೆ
ಕೊನೆಗೆ ನಿನ್ನ ದನಿಯನೇ ಕಿತ್ತುಕೊಂಡೆ...

ಸುಖವನಿತ್ತೆ ಕಣ್ಣಂಚಿನಲಿ
ನಿನ್ನ ಕಣ್ಣಿಂದ ಕಣ್ಣೀರನೂ ಕಿತ್ತುಕೊಂಡೆ...

ಇಲ್ಲದ ಸುಖವ ಕೊಡುವ ಭರವಸೆಯಿತ್ತು
ಇದ್ದ ದುಃಖವನ್ನೂ ಕಿತ್ತುಕೊಂಡೆ...

ನಿನ್ನ ಲಾಭ ನಷ್ಟದ ಲೆಕ್ಕ
ತೂಗುವ ತಕ್ಕಡಿಯ ಮುಳ್ಳ ಕಿತ್ತುಕೊಂಡೆ...

ಅದೇಕೋ ನನ್ನ ಮೇಲೆ ನನಗೇ ಬೇಸರಿಕೆ..
ನಿನ್ನಿಂದ ನಾ ಎಲ್ಲ ಕಿತ್ತುಕೊಂಡೆ...

ಕಿತ್ತುಕೊಂಡದ್ದು ನನಗೂ ಉಳಿಯಲಿಲ್ಲ
ನಾನು ನನ್ನಿಂದ ನನ್ನನ್ನೇ ಕಿತ್ತುಕೊಂಡೆ...

Tuesday, July 1, 2008

ಅದಕೆಂದೇ...

ಏಕಾಂತದ ನಗರಿಯಲ್ಲೊಂದು ಮನೆಯ ಕಟ್ಟಿಕೊಂಡೆ
ಅವಹೇಳನಗಳನ್ನೆಲ್ಲ ಹಣೆಬರಹವಾಗಿಸಿಕೊಂಡೆ

ಕಲ್ಲ ಪೂಜಿಸುವುದ ಕಂಡೆ ಜಗದಲಿ ಅದಕೆಂದೇ
ನನ್ನ ಮನಸನ್ನೂ ಕಲ್ಲಾಗಿಸಿಕೊಂಡೆ..


(Translated from a Urdu ashaar)
ಭಾವನೆ

ನನ್ನ ಧೈರ್ಯಕೆ
ತಲೆಬಾಗಿ
ಬಿರುಗಾಳಿ
ಸುತ್ತು ತಿರುಗುತಿದೆ

ಲೋಕದ ದೃಷ್ಟಿಯಲಿ
ನನ್ನ ಹಡಗು ಸುಳಿಯಲ್ಲಿ
ಸಿಲುಕಿ ಮುಳುಗುತಿದೆ


(Translated from a Urdu ashaar)
ನನ್ನವಳು

ಕೆಲವೊಮ್ಮೆ
ಮುಟ್ಟಿದರೆ ಮುನಿ...
ಕೆಲವೊಮ್ಮೆ
ಮುತ್ತಿಡದಿದ್ದರೆ ಮುನಿ ...